ನಿರ್ಮಾಣ: ಎಸ್.ವಿ ಬಾಬು
ಕಥೆ-ಚಿತ್ರಕಥೆ-ನಿರ್ದೇಶನ: ರಿಶಬ್ ಶೆಟ್ಟಿ
ಛಾಯಾಗ್ರಹಣ : ವೆಂಕಟೇಶ್ ಅಂಗುರಾಜ್
ಸಂಗೀತ : ಅರ್ಜುನ್ ಜನ್ಯ
ಸಂಕಲನ : ಎನ್.ಎಮ್ ವಿಶ್ವ
ತಾರಾಗಣ : ರಕ್ಷಿತ್ ಶೆಟ್ಟಿ , ಹರಿಪ್ರಿಯಾ, ವೀಣಾ ಸುಂದರ್, ಅಚ್ಯುತ್ ಕುಮಾರ್,
ಪ್ರಮೋದ್ ಶೆಟ್ಟಿ, ರವಿ ಕಾಳೆ, ಶಶಿಕಲಾ, ಸಾಧುಕೋಕಿಲಾ, ಮಂಜುನಾಥ್,
ದಿನೇಶ್ ಮಂಗಳೂರು, ರಘು ಪಾಂಡೇಶ್ವರ ಮತ್ತು ಇತರರು.
ಒಂದು ಚಿತ್ರ ಚಿತ್ರಮಂದಿರದಾಚೆಗೂ ಕಾಡತೊಡಗಿ,ಅದರೊಂದಿಗೆ ಚಿಂತನೆಗೆ ದಾರಿ ಮಾಡಿಕೊಡುತ್ತದೆ ಎಂದಾದರೆ ಅದು ಗೆದ್ದಿದೆ ಎಂದೇ ಅರ್ಥ.'ರಿಕ್ಕಿ'ಯೂ ಈ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಪಡೆದಿದೆ.
ಚಿತ್ರದ ಮೊದಲಿನಿಂದ ಕೊನೆಯವರೆಗೂ ಕಾಡುವುದರಲ್ಲಿ ಮೊದಲನೆಯದು ಸಂಭಾಷಣೆ.ಭಾವನಾ ಸ್ತರದಲ್ಲೇ ಚಿತ್ರದ ಸಂಭಾಷಣೆಗಳು ಸಾಗುತ್ತಾ ಹೋಗುತ್ತವೆ;ಆಪ್ತವಾಗುತ್ತವೆ.ಪಂಚ್ ಡೈಲಾಗ್'ಗಳಿಗೆ ಸೀಮಿತಗೊಳ್ಳದೇ ಸಾಹಿತ್ಯಿಕವಾಗಿ ಸಾಗುವ ,ಪ್ರಾದೇಶಿಕ ಸೊಗಡಿನೊಂದಿಗೆ ಮಿಳಿತವಾಗಿರುವ ಕಾರಣದಿಂದ ಬೇಗನೇ ಕಥೆಯೊಳಗೆ ನಮ್ಮನ್ನು ಎಳೆದುಕೊಳ್ಳುತ್ತದೆ.
ಯಾವುದೋ ಲಹರಿಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಪಡೆದಿರುವುದು ಮೊದಲಾರ್ಧದ ಪ್ರೇಮ ಕಥೆ.ಪ್ರೇಮಿಗಳು ಆಡುವ ಮಾತಿಗಿಂತ ಅವರ ನಡುವಿನ ಮೌನಕ್ಕೆ ಹೆಚ್ಚು ಬೆಲೆ ಎಂಬುದನ್ನು ಸಮರ್ಥವಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕರ ಜಾಣ್ಮೆಗೆ ತಲೆದೂಗಲೇಬೇಕು.ಚಿತ್ರದ ಛಾಯಾಗ್ರಹಣ ಸುಂದರ.ಸಂಗೀತವೂ ಗುನುಗಿಕೊಳ್ಳುವಂತೆ ಇದೆ.
ದ್ವಿತೀಯಾರ್ಧ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ಕಥೆಗೆ ಕೊಟ್ಟಿರುವ ತಾರ್ಕಿಕ ಅಂತ್ಯ ವ್ಯವಸ್ಥೆಗೆ ಹಿಡಿದ ಕನ್ನಡಿ.ಸಮಾಜದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲದ್ದು ದುರಂತವೇ.ಹಾಗಿದ್ದೂ ಚಿಂತನೆಗೆ ಹಚ್ಚುವಂತೆ ಮಾಡಿ ಚಿತ್ರ ಗೆದ್ದದ್ದೂ ಇಲ್ಲೆಯೇ.
ನಟನೆಯಲ್ಲಿ ರಕ್ಷಿತ್ ಶೆಟ್ಟಿಗಿಂತ ಹರಿಪ್ರಿಯಾಗೆ ಜಾಸ್ತಿ ಅಂಕ.ಉಳಿದವರ ಅಭಿನಯವೂ ಮನೋಜ್ಞವಾಗಿದೆ.
ಚಿತ್ರದ ಓಘಕ್ಕೆ ತಡೆಯೊಡ್ಡುವುದು ಅನಾವಶ್ಯಕವಾದ ಸಾಧುಕೋಕಿಲಾರ ಪಾತ್ರ.ಅವರ ಅಭಿನಯದ ಬಗ್ಗೆ ಮಾತಿಲ್ಲದಿದ್ದರೂ ಚಿತ್ರಕ್ಕೆ ಅವರ ಅವಶ್ಯಕತೆಯೇ ಇರಲಿಲ್ಲವಾದ್ದರಿಂದ ತಾಳ್ಮೆ ಪರೀಕ್ಷೆಯಾಗುತ್ತದೆ.
ಒಂದು ಭಿನ್ನ ಕಥೆಯ,ಬದುಕಿನ ದುರಂತದವನ್ನು ತೋರಿಸುವ 'ರಿಕ್ಕಿ'ಗೆ ಒಮ್ಮೆ ಜೈ ಅನ್ನಬಹುದು...ಹಾಗೆಯೇ ಇದೇ ತಂಡದಿಂದ ಇನ್ನೂ ಉತ್ತಮ ಚಿತ್ರಗಳನ್ನು ಬಯಸುವುದು ಅತಿಶಯೋಕ್ತಿಯಾಗಲಾರದು…