Sunday 21 August 2016

ಸೂರ್ಯೋದಯ



ಕಣ್ತುಂಬಿಕೊಳ್ಳುವುದಕ್ಕಾಗಿ,
ಪರ್ವತವನ್ನು ಏರಿದರು,ಶರಧಿಯ ಪದತಲದಲ್ಲಿ ಹೊರಳಾಡಿದರು,
ನಯನದೊಂದಿಗೆ ಮತ್ಯಾವುದರಲ್ಲೋ ಕಾಣುವುದಕ್ಕೆ ಹಂಬಲಿಸಿದರು,
ಭಾವದಲ್ಲಿ ಸ್ಥಾಯಿಯಾದ,
ಊರ್ಧ್ವಮುಖಿಯನ್ನು ಪದಗಳಲ್ಲಿ ಹಿಡಿಯಲೆತ್ನಿಸಿದರು,
ಮೇಲೇರುವ ಅವನನ್ನು ತಮ್ಮ ಅರಿವಿನ ಪರಿಧಿಯೊಳಗೆ ಸಿಲುಕಿಸುವ,
ಕಾತರ...ಹಂಬಲ...ಪ್ರಯತ್ನಕ್ಕೆ ಕೊನೆಯೆಲ್ಲಿಯದು?
ಯಾರವನು...?

ಕತ್ತಲು,ನಿದ್ರೆ,ಕನಸನ್ನು ಕೊಲ್ಲುವ ಕೊಲೆಗಾರನೋ?
ತನ್ನೊಂದಿಗೆ ಸರ್ವರನ್ನೂ ಎಚ್ಚರಿಸುವ ಸ್ವಾರ್ಥಿಯೋ?
ನಿಶಾಚರಿಗಳ ದ್ವೇಷಿಯೋ?
ದಿನಕ್ಕೊಂದು ಸಮಯದಲ್ಲಿ ಏಳುವ ಕಾಲದ ಪರಿವಿಲ್ಲದವನೋ?
ಅಥವಾ,
ಶಶಿಗೆ ಪ್ರಭೆಯನ್ನು ನೀಡಿ,
ಆತನ ಶಕ್ತಿ ಕುಂದಿದಾಕ್ಷಣ ಬರುವ ಪ್ರಾಣ ಸ್ನೇಹಿತನೋ?
ಲೌಕಿಕತೆಯನ್ನು ನಾಶ ಮಾಡುವ ದೇವನೋ?
ಪ್ರೇರೇಪಿಸುವ ಶಕ್ತಿಯೋ?
ಯಾರಿರಬಹುದು?
ಇವೆಲ್ಲವೂ ಒಬ್ಬನೇ ಆದ ಅವಿನಾಶಿಯೇ?
ಗೊತ್ತಿಲ್ಲ...!

ಎಷ್ಟೋ ನಕ್ಷತ್ರದಂತಹ ಜನರಲ್ಲಿ ಅವನೊಬ್ಬನಂತೆ...
ಸೂರ್ಯ ಎನ್ನುತ್ತಾರಂತೆ...
ಬೆಳಕು ನೀಡುವುದೇ ಕಾಯಕವಂತೆ!
ಅರಿವು ನೀಡುವವರೆಲ್ಲಾ ಸೂರ್ಯರಾದಾರೇ?
ಯಾರಿಗೆ ಯಾವ ನಕ್ಷತ್ರ...?ಯಾರು ಸೂರ್ಯ...?
ಅವನ ಉದಯಕ್ಕಾಗಿಯೇ ಎಲ್ಲರ ಕನವರಿಕೆ...!



{ ಮೈಸೂರು ವೈದ್ಯಕೀಯ ಕಾಲೇಜಿನವರು ಆಯೋಜಿಸಿದ್ದ,'ಕನ್ನಡ ಕವಿತೆ' ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಬಹುಮಾನ ಬಂದ ಕವಿತೆ}

ಕನಸಿನ ಕನವರಿಕೆ



ನೀರವ ರಾತ್ರಿ,
ಕಮರಿದ ಚಂದ್ರ,
ಕರಾಳ ಮೌನದ ಸಾಮ್ರಾಜ್ಯ,
ಅದನ್ನು ತುಳಿಯುತ್ತಾ ಅವಳು ಹೊರಟಳು…
ಕತ್ತಲಲ್ಲಿ ಕರಗುತ್ತಾ,ಕತ್ತಲಲ್ಲಿ ಒಂದಾಗಬೇಕೆಂದು ಬಯಸುತ್ತಾ…
ಸಮಯದ ಹಂಗಿಲ್ಲ,ಬೆಳಕಿನ ಹಂಬಲವಿಲ್ಲ..
ಆದರೆ...
ಇದ್ದಕ್ಕಿದ್ದಂತೆ,
ಪ್ರಖರವಾಗಿ ತಿವಿದಂತಾಯಿತು,
ಬೆಳಕಂತೆ!
*****
ಇವ ಕಣ್ತೆರದ….
ಅವಳು ಕಾಣಲಿಲ್ಲ…
ಹುಡುಕುತ್ತಾ ಹೊರಟ…
ಅದೇ ರಾತ್ರಿ…ಕತ್ತಲು…ಮೌನ…
ಏನೋ ಕಂಡಂತಾಯಿತು!
ಅವಳೇ,ಅವಳೇ…
*****
ಇನ್ನೆಲ್ಲೋ ಯಾರೋ ಕಣ್ಣುಬಿಟ್ಟರು...
ಇವ ಮಾಯವಾದ...!
ಅವರು ಹೊರಟರು,ಇವನನ್ನು ಅರಸುವುದಕ್ಕಂತೆ!!!
*****